Gun training- ಕುರಿ ಸಾಕಾಣಿಕೆದಾರರಿಗೆ ಉಚಿತ ಬಂದೂಕು ತರಬೇತಿಗೆ ಅರ್ಜಿ ಆಹ್ವಾನ
ಕುರಿಗಾರರ ಆತ್ಮರಕ್ಷಣೆಗೆ ದಿಟ್ಟ ಹೆಜ್ಜೆ ಇಟ್ಟ ಸರ್ಕಾರ...

ಕುರಿಗಾರರ ಆತ್ಮ ರಕ್ಷಣೆಗೆ ದಿಟ್ಟ ಹೆಜ್ಜೆ ಇಟ್ಟಿರುವ ರಾಜ್ಯ ಸರ್ಕಾರ ಬಂದೂಕು ತರಬೇತಿ ನೀಡಲು ಮುಂದಾಗಿದೆ. ಬಂದೂಕು ತರಬೇತಿ ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…
ರಾಜ್ಯದಲ್ಲಿ ಕುರಿಗಾರರ ಮೇಲೆ ಹಲ್ಲೆ, ಹತ್ಯೆ, ದೌರ್ಜನ್ಯದಂತಹ ಸಾಲು ಸಾಲು ಪ್ರಕರಣಗಳು ಘಟಿಸುತ್ತಿವೆ. ದುಷ್ಕರ್ಮಿಗಳ ಅಟ್ಟಹಾಸಕ್ಕೆ ನಿಸ್ಪಾಪಿ ಕುರಿಗಾರರ ಬದುಕು ಮೂರಾಬಟ್ಟೆಯಾಗುತ್ತಿದೆ. ಕುರಿ ಕಳ್ಳತನ, ಕುರಿಗಾರ ಮಕ್ಕಳು, ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ಕುರಿಗಾರರನ್ನು ಬೆಚ್ಚಿ ಬೀಳಿಸುತ್ತಿವೆ.
ಕಳೆದ ವರ್ಷ ಇಂತಹ ಎಂಟು ಗಂಭೀರ ಪ್ರಕರಣಗಳು ಜರುಗಿದ್ದವು. ಇತ್ತೀಚೆಗೆ ಬಾದಾಮಿ ತಾಲೂಕಿನ ಉಗಲವಾಟದಲ್ಲಿ ಕುರಿಗಳ ಕಳ್ಳತನಕ್ಕೆ ಬಂದಿದ್ದ ದುರುಳರು ಕುರಿಗಳ ರಕ್ಷಣೆಗೆ ಮುಂದಾಗಿದ್ದ ಕುರಿಗಾರ ಶರಣಪ್ಪ ಜಮ್ಮನಕಟ್ಟಿ ಎಂಬಾತನನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು.
ಪ್ರಕರಣ ರಾಜ್ಯದ ಕುರಿಗಾರರನ್ನು ಬೆಚ್ಚಿ ಬೀಳಿಸಿತ್ತು. ಪೊಲೀಸರು ಕುರಿಗಾರ ಶರಣಪ್ಪನ ಹತ್ಯಾರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದು; ಘಟನೆ ನಂತರ ಪ್ರತಿಭಟನೆಗಳು ನಡೆದಿದ್ದವು. ಇದರ ಬೆನ್ನಲ್ಲೇ ಇದೀಗ ಕುರಿಗಾರರಿಗೆ ಬಂದೂಕು ತರಬೇತಿ ನೀಡಲು ಸರ್ಕಾರ ಮುಂದಾಗಿದೆ.
ಇದನ್ನೂ ಓದಿ: ಇನ್ಮುಂದೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ಆಸ್ತಿಗಳಿಗೂ ಸಿಗಲಿದೆ ಇ-ಸ್ವತ್ತು
ವಿಶೇಷ ಬಂದೂಕು ತರಬೇತಿ
ಕುರಿಗಾರರ ಆತ್ಮರಕ್ಷಣೆಗೆ ದಿಟ್ಟ ಹೆಜ್ಜೆ ಇಟ್ಟಿರುವ ಬಾಗಲಕೋಟೆ ಜಿಲ್ಲಾ ಪೊಲೀಸರು, ವಿಶೇಷ ಬಂದೂಕು ತರಬೇತಿ ಹಮ್ಮಿಕೊಂಡಿದ್ದಾರೆ. ಪೊಲೀಸ್ ಇಲಾಖೆ ಇತಿಹಾಸದಲ್ಲೇ ಇದು ಮೊದಲ ಪ್ರಯತ್ನ ಎನ್ನಲಾಗಿದೆ. ಏಪ್ರಿಲ್ 7 ರಿಂದ ಏಪ್ರಿಲ್ 13ರ ವರೆಗೆ ತರಬೇತಿ ಜರುಗಲಿದೆ.
ಕುರಿ ಕಳವು, ಕುರಿಗಾರರ ಮೇಲೆ ಹಲ್ಲೆ ಪ್ರಕರಣಗಳ ತಡೆಗೆ ದಿಟ್ಟ ಕ್ರಮ ಕೈಗೊಳ್ಳಲು ನಿರ್ಧರಿಸಿದ ಎಸ್ಪಿ ವೈ.ಅಮರನಾಥ ರೆಡ್ಡಿ ಅವರು ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಅವರ ಆತ್ಮರಕ್ಷಣೆಗಾಗಿ ಬಂದೂಕು ತರಬೇತಿ ನೀಡಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ: Bagar Hukum-ಬಗರ್ಹುಕುಂ ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡುವ ರೈತರಿಗೆ ವಿನಾಯಿತಿ
ತರಬೇತಿ ಹೇಗಿರುತ್ತದೆ?
ಬಂದೂಕು ಹಿಡಿಯುವುದು, ಬಂದೂಕಿನ ಗುರಿ ತಯಾರಿ, ಬಂದೂಕು ಬಳಕೆಗೆ ಇರುವ ಕಾನೂನು, ಅದನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಸೇರಿದಂತೆ ಸಂಪೂರ್ಣ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ತರಬೇತಿ ಜರುಗಲಿದೆ. ತರಬೇತಿಯಲ್ಲಿ ಪಾಲ್ಗೊಳ್ಳಲು ಶಿಕ್ಷಣದ ಮಾನದಂಡಗಳು ಇಲ್ಲ. 60 ವರ್ಷ ವಯಸ್ಸಿನ ಒಳಗಿನವರು ತರಬೇತಿ ಪಡೆಯಬಹುದಾಗಿದೆ.
ಪೊಲೀಸ್ ತರಬೇತಿ ಶಾಲೆಯಲ್ಲಿ 200 ಜನರಿಗೆ ಏಕಕಾಲಕ್ಕೆ ತರಬೇತಿ ನೀಡಲು ಅವಕಾಶವಿದೆ. ಆರು ದಿನಗಳ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ನಂತರದಲ್ಲಿ ಪ್ರಮಾಣಪತ್ರ ವಿತರಿಸಲಾಗುತ್ತದೆ. ಕುರಿಗಾರರು ಅದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಕೋರಲಾಗಿದೆ.
ಇದನ್ನೂ ಓದಿ: Sashakt Panchayat Netri Abhiyan- ಗ್ರಾಮ ಪಂಚಾಯತಿಗಳಲ್ಲಿ ಇನ್ನು ಗಂಡಂದಿರ ದರ್ಬಾರ್ ಬಂದ್
ಅರ್ಜಿ ಸಲ್ಲಿಕೆ ಹೇಗೆ?
18 ವರ್ಷ ಮೇಲ್ಪಟ್ಟ ಅಪರಾಧ ಹಿನ್ನೆಲೆ ಇಲ್ಲದ ಕುರಿಗಾರರು ಬಂದೂಕು ತರಬೇತಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಪೊಲೀಸ್ ಶಸ್ತ್ರಾಗಾರದಿಂದ ಅರ್ಜಿ ಪಡೆದು ಪೊಲೀಸ್ ಪರಿಶೀಲನೆ, ಗುರುತಿನ ಚೀಟಿ, 3 ಭಾವಚಿತ್ರದೊಂದಿಗೆ ಏಪ್ರಿಲ್ 5ರ ಒಳಗಾಗಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ 9480803906, 9480803937 ಸಂಪರ್ಕಿಸಬಹುದು.
ಕುರಿಗಾಹಿಗಳು ಶ್ರಮಜೀವಿಗಳು ಬೆಟ್ಟ, ಗುಡ್ಡಗಳಲ್ಲಿ ಓಡಾಡಿ ಜೀವನ ಸಾಗಿಸುತ್ತಾರೆ. ಅವರ ಬಳಿ ಬಂದೂಕು ಇದೆ ಎಂಬ ವಿಷಯ ಗೊತ್ತಾದರೂ ಕಳ್ಳರಲ್ಲಿ ಭಯ ಹುಟ್ಟುತ್ತದೆ. ಪೊಲೀಸ್ ಇಲಾಖೆಯಂತೂ ಸಂಪೂರ್ಣ ಗಂಭೀರವಾಗಿ ಪರಿಗಣಿಸಿ ಕುರಿಗಾರರ ರಕ್ಷಣೆಗೆ ವಿಶೇಷ ಒತ್ತು ನೀಡುತ್ತಿದೆ ಎಂದು ಎಸ್ಪಿ ವೈ.ಅಮರನಾಥ ರೆಡ್ಡಿ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: Rover survey- ಇನ್ಮುಂದೆ ಕೇವಲ ಹತ್ತು ನಿಮಿಷದಲ್ಲೇ ಭೂಮಿ ಸರ್ವೇ