Oil Palm Farming – ಈ ಬೆಳೆ ಬೆಳೆದರೆ ಸರಕಾರಿ ನೌಕರರಂತೆ ರೈತರಿಗೂ ತಿಂಗಳ ಸಂಬಳ
ಬರದ ನಾಡಿನ ರೈತರಿಗೆ ವರವಾದ ವಾಣಿಜ್ಯ ಬೆಳೆ

ಸರಕಾರ ಮತ್ತು ತೋಟಗಾರಿಕೆ ಇಲಾಖೆ ಪ್ರೋತ್ಸಾಹದಡಿ ‘ತಾಳೆ ಕೃಷಿ’ (Oil Palm Farming) ಮಾಡಲು ಎಲ್ಲೆಡೆ ರೈತರಿಗೆ ಉಚಿತವಾಗಿ ತಾಳೆ ಸಸಿಯನ್ನು ನೀಡುವುದರ ಜತೆಗೆ ರಸಗೊಬ್ಬರ, ತಾಂತ್ರಿಕ ಸಲಹೆಯನ್ನು ಉಚಿತವಾಗಿ ನೀಡಲಾಗುತ್ತಿದೆ. ಬರದ ನಾಡು, ಬಿಸಿಲೂರು ಬಳ್ಳಾರಿ ಸೇರಿದಂತೆ ರಾಜ್ಯಾದ್ಯಂತ ತಾಳೆ ಕೃಷಿ ಮಾಡುತ್ತಿರುವ ರೈತರ ಸಂಖ್ಯೆ ಹೆಚ್ಚಾಗುತ್ತಿದೆ.
ರೈತರಿಗೆ ಹಲವು ಪ್ರಯೋಜನ
ಬರ-ನೆರೆಯಿಂದ ಜರ್ಜರಿತರಾಗಿರುವ ರೈತರಿಗೆ ತಾಳೆ ಕೃಷಿಯಿಂದ ಸಾಕಷ್ಟು ಅನುಕೂಲಗಳಿವೆ. ಈ ಬೆಳೆಗೆ ಹೆಚ್ಚಾಗಿ ರೋಗ-ಕೀಟ ಬಾಧೆ ಇರಲ್ಲ. ಕಳ್ಳರ ಕಾಟವಿಲ್ಲ, ದಲ್ಲಾಳಿ ಅಥವಾ ವರ್ತಕರ ಪೀಡನೆ ಇಲ್ಲ, ಸರಕಾರದ ಬೆಂಬಲ ಬೆಲೆಯಡಿ ಖರೀದಿಸುವುದರಿಂದ ಮಾರುಕಟ್ಟೆ ಸಮಸ್ಯೆಯೂ ಇಲ್ಲ.
ವಾಣಿಜ್ಯ ಬೆಳೆಯಾಗಿರುವ ‘ತಾಳೆ’ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ತರುವಂತಹ ಬೆಳೆ. ನೀರಿನ ವ್ಯವಸ್ಥೆ ಇದ್ದರೆ ಸಾಕು. ಈ ಹಿಂದೆ ಜಲಾಶಯ ಪ್ರದೇಶದಲ್ಲಿ ಮಾತ್ರ ತಾಳೆ ಬೆಳೆಯುತ್ತಿದ್ದರು. ಇದೀಗ ಬೋರ್ವೆಲ್ ಹೊಂದಿರುವ ರೈತರು ಸಹ ಹನಿ ನೀರಾವರಿ ಪದ್ಧತಿಯಲ್ಲಿ ತಾಳೆ ಕೃಷಿ ಮಾಡಿ ಯಶಸ್ಸು ಪಡೆಯುತ್ತಿದ್ದಾರೆ.
ಇದನ್ನೂ ಓದಿ: Crop Insurance Karnataka : ರೈತರೇ ನಿಮಗೆ ಗ್ಯಾರಂಟೀ ಬೆಳೆ ವಿಮೆ ಹಣ ಸಿಗಬೇಕೆಂದರೆ ತಪ್ಪದೇ ಈ ಕ್ರಮ ಅನುಸರಿಸಿ…
ಸರಕಾರಿ ನೌಕರರಂತೆ ಆದಾಯ
ನಾಟಿ ಮಾಡಿದ ಮೂರು ವರ್ಷದಿಂದ ಬೆಳೆ ಆರಂಭವಾಗುತ್ತದೆ. ಸತತ 30 ವರ್ಷಗಳ ಕಾಲ ಪ್ರತಿ ತಿಂಗಳು ಸರಕಾರಿ ನೌಕರರಂತೆ ಆದಾಯ ಸಿಗುತ್ತದೆ. ಒಂದು ಎಕರೆಗೆ ವಾರ್ಷಿಕ 3-4 ಟನ್ ಇಳುವರಿ ಬರುತ್ತದೆ. ವರ್ಷವಿಡೀ ಬರುವ ಬೆಳೆ ಇದಾಗಿದ್ದು, ತಿಂಗಳಲ್ಲಿ ಎರಡು ಬಾರಿ ಕಟಾವು ಮಾಡಬಹುದು. ಆದರೆ ಇದಕ್ಕೆ ಮುಖ್ಯವಾಗಿ ನೀರು, ಗೊಬ್ಬರ ನೀಡುತ್ತಿರಬೇಕು.
ನಾಟಿ ಮಾಡಿದ ಒಂದು ವರ್ಷಕ್ಕೆ ಹೂ ಪ್ರಾರಂಭವಾಗುತ್ತದೆ. ಅದನ್ನು ಮೂರು ವರ್ಷದ ವರೆಗೆ ತೆಗೆಯಬೇಕು. ನಂತರ ಬೆಳೆಗೆ ಬಿಡಬೇಕು. ಗಿಡದಿಂದ ಗಿಡಕ್ಕೆ 30 ಅಡಿ ಅಂತರ, ಸಾಲಿನಿಂದ ಸಾಲಿಗೆ 39 ಅಂತರದಲ್ಲಿ ನಾಟಿ ಮಾಡಬೇಕು. ಒಂದು ಎಕರೆಗೆ 60 ಗಿಡ ನೆಡಬಹುದು. ನಾಟಿ ಮಾಡಿದ ಎರಡು ವರ್ಷಗಳ ತನಕ ಅಂತರ ಬೆಳೆ ಬೆಳೆದುಕೊಳ್ಳಬಹುದು.
ಇದನ್ನೂ ಓದಿ: Geranium Cultivation : ರೈತರಿಗೆ ಭಾರೀ ಆದಾಯ ತರುವ ವನಸ್ಪತಿ ಬೆಳೆ
ಸರಕಾರದಿಂದ ಸಹಾಯಧನ
ಕೇಂದ್ರ ಸರ್ಕಾರದ ‘ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ-ತಾಳೆ ಬೆಳೆ ಯೋಜನೆ’ (National Mission on Edible Oils – Oil Palm – NMEO-OP) ಅಡಿಯಲ್ಲಿ ತಾಳೆ ಬೆಳೆ ಉತ್ತೇಜಿಸಲು ಹೊಸ ಪ್ರದೇಶ ವಿಸ್ತರಣೆಗೆ ಪ್ರತಿ ಹೆಕ್ಟೇರ್ಗೆ 20,000 ರೂ. ನಂತೆ ಸಹಾಯಧನ ನೀಡಲಾಗುತ್ತದೆ.
ಈ ಹಿಂದೆ ಅಭಿವೃದ್ಧಿಪಡಿಸಲಾದ ತಾಳೆ ಬೆಳೆ ತೋಟಗಳಿಗೆ 2ನೇ, 3ನೇ ಮತ್ತು 4ನೇ ವರ್ಷದ ನಿರ್ವಹಣೆಗೆ ಪ್ರತಿ ಹೆಕ್ಟೇರ್ಗೆ 5,250 ರೂ. ಮೊತ್ತದ ರಾಸಾಯನಿಕ ಮತ್ತು ಸಾವಯವ ಗೊಬ್ಬರ ನೀಡಲಾಗುತ್ತದೆ.
ಕನಿಷ್ಠ ಒಂದು ಹೆಕ್ಟೇರ್ ತಾಳೆ ಬೆಳೆ ಪ್ರದೇಶವನ್ನು ಕೈಗೊಂಡಿರುವ ಫಲಾನುಭವಿಗಳಿಗೆ 15 ಎಚ್.ಪಿ. ಸಾಮರ್ಥ್ಯದ ಡೀಸೆಲ್/ವಿದ್ಯುತ್ ಚಾಲಿತ ಪಂಪ್ಸೆಟ್ ಖರೀದಿಸಲು ಸಾಮಾನ್ಯ ರೈತರಿಗೆ ಒಟ್ಟು ಖರ್ಚಿನ ಶೇ.50 ರಷ್ಟು ಪ್ರತಿ ಘಟಕಕ್ಕೆ ಗರಿಷ್ಠ 22500 ರೂ., ಸಹಾಯಧನ ಹಾಗೂ ಎಸ್ಸಿ\ಎಸ್ಸಿ ಹಾಗೂ ಅತಿ ಸಣ್ಣ ಮತ್ತು ಸಣ್ಣ ರೈತ ಫಲಾನುಭವಿಗಳಿಗೆ ಪ್ರತಿ ಘಟಕಕ್ಕೆ ಗರಿಷ್ಠ 27,000 ರೂ. ಸಹಾಯಧನ ನೀಡಲಾಗುತ್ತದೆ.
ಇದನ್ನೂ ಓದಿ: KCC Loan Limit Increase : ರೈತರಿಗೆ ಕಡಿಮೆ ಬಡ್ಡಿಯಲ್ಲಿ ₹5 ಲಕ್ಷ ಕೆಸಿಸಿ ಲೋನ್
ಕನಿಷ್ಠ ಒಂದು ಹೆಕ್ಟೇರ್ ಪ್ರದೇಶದಲ್ಲಿ ಇಳುವರಿ ನೀಡುತ್ತಿರುವ ಅಥವಾ 5 ವರ್ಷಕ್ಕಿಂತ ಹೆಚ್ಚಿರುವ ತಾಳೆ ತೋಟದಲ್ಲಿ ಹೊಸ ಕೊಳವೆಬಾವಿಗೆ ಶೇ.50ರಷ್ಟು ಅಥವಾ ಗರಿಷ್ಠ 50,000 ರೂ. ಸಹಾಯಧನ ನೀಡಲಾಗುತ್ತದೆ.
ತಾಳೆ ಬೆಳೆಯುವ ರೈತರು ಮೊದಲ ನಾಲ್ಕು ವರ್ಷದ ವರೆಗೆ ತಾಳೆ ಬೆಳೆಯಲ್ಲಿ ತೋಟಗಾರಿಕೆ ಬೆಳೆಗಳ ಅಂತರ ಬೇಸಾಯ ಕೈಗೊಂಡಲ್ಲಿ ಪ್ರತಿ ಹೆಕ್ಟೇರ್ 5,000 ರೂ. ಸಹಾಯಧನ ನೀಡಲಾಗುತ್ತದೆ.
ಆಸಕ್ತ ರೈತರು ತಾಳೆ ಕೃಷಿ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಆಯಾ ಜಿಲ್ಲೆ, ತಾಲ್ಲೂಕುಗಳ ತೋಟಗಾರಿಕೆ ಇಲಾಖೆಗೆ ಸಂರ್ಪಕಿಸಬಹುದು.
ಇದನ್ನೂ ಓದಿ: Dwarf Arecanut Specialty : ಕುಬ್ಜ ತಳಿ ಅಡಿಕೆ ಕೃಷಿ