ಕಳೆದ ಜೂನ್ 09 ರಂದು ಮೂರನೇ ಭಾರಿ ಪ್ರದಾನಿಯಾಗಿ ಅಧಿಕಾರ ವಹಿಸಿಕೊಂಡ ತಕ್ಷಣ ನರೇಂದ್ರ ಮೋದಿ ಅವರು ರೈತರಿಗೆ ನೀಡುವ ಕಿಸಾನ್ ನಿಧಿಯ ಹಣ ಬಿಡುಗಡೆಗೆ ಸಹಿ ಹಾಕಿದ್ದರು. ಇದೀಗ ಜೂನ್ 18ನೇ ತಾರೀಖು ದೇಶದ ಎಲ್ಲ ರೈತರ ಬ್ಯಾಂಕ್ ಖಾತೆಗೆ ತಲಾ 2,000 ರೂಪಾಯಿ ಜಮಾ ಆಗಲಿದೆ ಎಂದು ಪಿಎಂ ಕಿಸಾನ್ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಲಾಗಿದೆ.
ಕೇಂದ್ರ ಸರಕಾರವು ಕಳೆದ ಆರು ವರ್ಷಗಳಿಂದ ರೈತರಿಗೆ ವರ್ಷಕ್ಕೆ ತಲಾ 6,000 ರೂಪಾಯಿಯಂತೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯಡಿ ಆರ್ಥಿಕ ನೆರವು ನೀಡುತ್ತ ಬರುತ್ತಿದೆ. ಸದರಿ ಯೋಜನೆಯಡಿ 2024ರ 17ನೇ ಕಂತು ಬಿಡುಗಡೆಗೆ ಅನುಮತಿ ನೀಡಲಾಗಿದ್ದು, ಒಂದೆರಡು ದಿನಗಳಲ್ಲಿ ದೇಶದ 9.3 ಕೋಟಿ ರೈತರ ಖಾತೆಗಳಿಗೆ ಹಣ ವರ್ಗಾವಣೆಯಾಗಲಿದೆ.
ಈಗಾಗಲೇ 32,000 ರೂಪಾಯಿ ಜಮೆ
ಇದೊಂದು ಕೇಂದ್ರ ಸರ್ಕಾರದ ಸಾರ್ವಜನಿಕ ಕಲ್ಯಾಣ ಯೋಜನೆಯಾಗಿದ್ದು; ಸದರಿ ಯೋಜನೆಗೆ ಭಾರತ ಸರಕಾರವು ಶೇ.100 ಅನುದಾನ ಒದಗಿಸುತ್ತದೆ. ಪಿಎಂ ಕಿಸಾನ್ ಯೋಜನೆಯು 2018ರ ಡಿಸೆಂಬರ್ 1ರಿಂದ ಜಾರಿಗೆ ಬಂದಿದ್ದು; ಮರು ವರ್ಷ ಅಂದರೆ 2019ರ ಫೆಬ್ರವರಿಯಲ್ಲಿ ಮೊದಲ ಕಂತಿನ ಹಣವನ್ನು ದೇಶದ ರೈತರ ಖಾತೆಗೆ ಜಮಾ ಮಾಡಲಾಗಿದೆ.
ಈವರೆಗೂ ಒಟ್ಟು 16 ಕಂತುಗಳಲ್ಲಿ ಬರೋಬ್ಬರಿ 32,000 ರೂಪಾಯಿ ಫಲಾನುಭವಿ ರೈತರ ಖಾತೆಗೆ ಜಮಾ ಆಗಿದೆ. ಕಳೆದ ಫೆಬ್ರವರಿ ತಿಂಗಳಿನಲ್ಲಿ ಪಿಎಂ ಕಿಸಾನ್ ಯೋಜನೆಯ 16ನೇ ಕಂತನ್ನು ಬಿಡುಗಡೆ ಮಾಡಲಾಗಿತ್ತು. ಇದೀಗ 17ನೇ ಕಂತಿಗೆ ಸಹಿ ಹಾಕಿದ್ದು; ಒಂದೆರಡು ದಿನಗಳಲ್ಲಿ ಫಲಾನುಭವಿ ರೈತರ ಖಾತೆಗೆ ತಲಾ 2,000 ರೂಪಾಯಿ ಹಣ ಜಮೆಯಾಗಲಿದೆ.
ರೈತರ ಖಾತೆಗೆ ನೇರ ಹಣ ವರ್ಗಾವಣೆ
ಯಥಾಪ್ರಕಾರ ಪಿಎಂ ಕಿಸಾನ್ ಸಮ್ಮಾನ್ ನಿಧಿ 17ನೇ ಕಂತಿನ ಹಣವನ್ನು ಫಲಾನುಭವಿ ರೈತರ ಬ್ಯಾಂಕ್ ಖಾತೆಗಳಿಗೆ ಇದೇ ಜೂನ್ 18ರಂದು ನೇರವಾಗಿ ಜಮೆ ಮಾಡಲಾಗುತ್ತದೆ. ಹಣ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿದೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕೃತವಾಗಿ ಸಹಿ ಹಾಕಿ ಅನುಮತಿ ನೀಡಿರುವುದರಿಂದ ಜೂನ್ 18ರಂದು ಒಂದೇ ಕ್ಲಿಕ್’ನಲ್ಲಿ ದೇಶಾದ್ಯಂತ ಎಲ್ಲ ರೈಯರ ಖಾತೆಗೆ ಹಣ ವರ್ಗಾವಣೆ ಆಗಲಿದೆ.
ಲಕ್ಷಾಂತರ ರೈತರು ಈಗಾಗಲೇ ಇ-ಕೆವೈಸಿ ಸಲ್ಲಿಸಿದ್ದು, ಇನ್ನೂ ಬಹಳಷ್ಟು ರೈತರು ದಾಖಲೆಗಳನ್ನು ಸಲ್ಲಿಸಬೇಕಿದೆ. ಈ ಪೈಕಿ ಹಲವು ಈಗಾಗಲೇ ಮೃತಪಟ್ಟಿದ್ದಾರೆ. ಕೆಲವರು ಹಳ್ಳಿಯಿಂದ ನಗರಕ್ಕೆ ವಲಸೆ ಹೋಗಿದ್ದಾರೆ. ಇನ್ನು ಕೆಲವರು ಈ ಮೊದಲು ಮೊಬೈಲ್ ಸಂಖ್ಯೆ ಹಾಗೂ ಆಧಾರ್ ಸಂಖ್ಯೆ ತಪ್ಪಾಗಿ ನೀಡಿದ್ದಾರೆ. ಈ ಕಾರಣಕ್ಕೆ ಕಿಸಾನ್ ಸಮ್ಮಾನ್ ಹಣ ಸಂಪೂರ್ಣವಾಗಿ ಫಲಾನುಭವಿಗಳಿಗೆ ತಲುಪುತ್ತಿಲ್ಲ.
ಇಂತಹ ರೈತರು ತಮ್ಮ ಸಮೀಪದ ಗ್ರಾಮ ಒನ್ ಕೇಂದ್ರ, ಅಂಚೆ ಕಚೇರಿ, ಸಾಮಾನ್ಯ ಸೇವಾ ಕೇಂದ್ರಗಳು, ರೈತ ಸಂಪರ್ಕ ಕೇಂದ್ರಗಳ ಮೂಲಕ ಕಿಸಾನ್ ಸಮ್ಮಾನ್ಗೆ ಅಗತ್ಯವಾದ ದಾಖಲೆಗಳನ್ನು ಸಲ್ಲಿಸಬಹುದಾಗಿದೆ. ಆ ಮೂಲಕ ಕೇಂದ್ರ ಸರಕಾರದಿಂದ ವರ್ಷಕ್ಕೆ 6,000 ರೂಪಾಯಿ ಸಹಾಯಧನ ಪಡೆಯಬಹುದಾಗಿದೆ.
ನಿಮಗೆ ಹಣ ಬರುತ್ತಾ? ಈಗಲೇ ಚೆಕ್ ಮಾಡಿ…
ನಿಮ್ಮೂರಿನ ಎಷ್ಟು ಜನರಿಗೆ ಪಿಎಂ ಕಿಸಾನ್ 17ನೇ ಕಂತಿನ ಹಣ ಬರುವುದಿಲ್ಲ ಎಂಬುವುದನ್ನು ಪ್ರದಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ನಿಮ್ಮ ಮೊಬೈಲ್’ನಲ್ಲಿಯೇ ಮಾಹಿತಿ ಪಡೆಯಬಹುದು.
ಅದಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮಗೆ ಪಿಎಂ ಕಿಸಾನ್ ತಂತ್ರಾಶದ BENIFICIARY LIST (ಫಲಾನುಭವಿಗಳ ಪಟ್ಟಿ) ಡ್ಯಾಶ್ಬೋರ್ಡ್ ತೆರೆದುಕೊಳ್ಳುತ್ತದೆ. ಅಲ್ಲಿ ರಾಜ್ಯ, ಜಿಲ್ಲೆ, ಸಬ್ ಜಿಲ್ಲೆ (ತಾಲ್ಲೂಕು), ವಿಲೇಜ್ ಸೆಲೆಕ್ಟ್ ಮಾಡಿ ಸಬ್ಮಿಟ್ ಬಟನ್ ಕ್ಲಿಕ್ ಮಾಡಿದರೆ ನಿಮ್ಮೂರಿನ ಅಷ್ಟೂ ಫಲಾನುಭವಿಗಳ ಪಟ್ಟಿ ತೆರೆದುಕೊಳ್ಳುತ್ತದೆ. ಆ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಮಾತ್ರ ನಿಮಗೆ 17ನೇ ಕಂತಿನ 2,000 ರೂಪಾಯಿ ಸಂದಾಯವಾಗಲಿದೆ.