PTCL Act Amendment : ಸರ್ಕಾರದಿಂದ ಮಂಜೂರಾಗಿರುವ ರೈತರ ಭೂಮಿಯನ್ನು ಇನ್ಮುಂದೆ ಯಾರೂ ಮಾರುವಂತಿಲ್ಲ, ಅಂತಹ ಭೂಮಿಯನ್ನು ಖರೀದಿಸುವುದು ಅಷ್ಟು ಸುಲಭವೂ ಅಲ್ಲ. ರಾಜ್ಯದಲ್ಲಿ ಅನುಮೋದನೆಗೊಂಡಿರುವ ಪಿಟಿಸಿಎಲ್ ಕಾಯ್ದೆ ಕುರಿತ ಸಂಪೂರ್ಣ ಇಲ್ಲಿದೆ…
ಕಡೆಗೂ ಪಿಟಿಸಿಎಲ್ ಕಾಯ್ದೆ ಅರ್ಥಾತ್ ಜಮೀನು ಪರಭಾರೆ ನಿಷೇಧ (ತಿದ್ದುಪಡಿ) ಮಸೂದೆಗೆ 2023ರ ಜುಲೈ 18ರಂದು ನಡೆದ ವಿಶೇಷ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿತ್ತು. ಈ ಕಾಯ್ದೆ ಅನ್ವಯ ದೀನ ದಲಿತರಿಗೆ ಸರ್ಕಾರದಿಂದ ಮಂಜೂರಾಗಿರುವ ಭೂಮಿಯನ್ನು ಸ್ವತಃ ಭೂ ಮಾಲೀಕನೇ ಮಾರುವಂತಿಲ್ಲ ಮತ್ತು ಅಂತಹ ಭೂಮಿಯನ್ನು ಖರೀದಿಸುವುದು ಕೂಡ ಅಷ್ಟು ಸುಲಭವಲ್ಲ!
ಕೃಷಿ ಉದ್ದೇಶಕ್ಕೆ ಎಸ್ಸಿ ಹಾಗೂ ಎಸ್ಟಿ ಸಮುದಾಯದ ರೈತರಿಗೆ ಸರ್ಕಾರದಿಂದ ಮಂಜೂರಾಗಿರುವ ಭೂಮಿ ಅವರ ಬಳಿಯಲ್ಲಿ ಉಳಿಯುತ್ತಿಲ್ಲ. ಶೋಷಿತರ ಬಳಿಯಲ್ಲಿಯೇ ಸರಕಾರದ ಭೂಮಿ ಉಳಿಯಬೇಕು ಎಂಬ ಉದ್ದೇಶದಿಂದ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ಕೆಲ ಭೂಮಿಗಳ ಪರಭಾರೆ ನಿಷೇಧ) ಅಧಿನಿಯಮ 1978ಕ್ಕೆ ತಿದ್ದುಪಡಿ ತರಲಾಗಿದೆ.
ಏನಿದು ಕಾಯಿದೆ?
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳ ಅಭಿವೃದ್ಧಿಗಾಗಿ ಸರ್ಕಾರಿ ಜಮೀನುಗಳನ್ನು ಮಂಜೂರು ಮಾಡಿ, ಕೃಷಿಕರನ್ನಾಗಿಸಿ ಆ ಮೂಲಕ ಸುಗಮ ಜೀವನ ನಡೆಸಬೇಕೆಂಬುವುದು ಸರ್ಕಾರದ ಉದ್ದೇಶ. ಅದರಂತೆ, ಮಂಜೂರಾದ ಜಮೀನುಗಳನ್ನು ಬೇರೆಯವರಿಗೆ ಮಾರಾಟ ಮಾಡಿ ಪುನಃ ಭೂರಹಿತರಾಗಿ ಮತ್ತೊಮ್ಮೆ ಕೃಷಿ ಭೂಮಿ ಬೇಕೆಂದು ಸರ್ಕಾರವನ್ನು ಒತ್ತಾಯಿಸದಿರಲಿ ಎಂಬ ಉದ್ದೇಶದಿಂದಾಗಿ ಸರ್ಕಾರವು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ (ಕೆಲವು ಭೂಮಿಗಳ ವರ್ಗಾವಣೆ ನಿಷೇಧ) ಅಧಿನಿಯಮ, 1978 ಅನ್ನು ಜಾರಿಗೊಳಿಸಿದೆ.
ಸದರಿ ನಿಯಮದ ಕಲಂ 4(2)ರಂತೆ, ಜಮೀನು ಮಾರಾಟ ಮಾಡಲು ಸರ್ಕಾರದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ. ಆದರೆ ಸರ್ಕಾರದಿಂದ ಮಂಜೂರಾಗಿರುವ ಭೂಮಿಯನ್ನು ಬೇರೆ ಬೇರೆ ಕಾರಣದಿಂದ ವರ್ಗಾವಣೆ ಮಾಡಿರುವ ಪ್ರಕರಣಗಳು ಸಾಕಷ್ಟಿವೆ. ಸರ್ಕಾರದಿಂದ ಅನುಮತಿ ಪಡೆಯದೇ ಬೇಕಾಬಿಟ್ಟಿ ಮಾರಾಟ ಮಾಡಲಾಗುತ್ತಿದೆ.
ಅದರಿಂದಾಗಿ ಕೆಳಹಂತದ ನ್ಯಾಯಾಲಯಗಳಲ್ಲಿ ಸಾವಿರಾರು ಪ್ರಕರಣಗಳು ವಜಾ ಆಗುತ್ತಿವೆ. ದಲಿತರಿಗೆ ಕಳೆದುಕೊಂಡ ಭೂಮಿ ಮತ್ತೆ ಸಿಗುತ್ತಿಲ್ಲ. ಆದ್ದರಿಂದ ರಾಜ್ಯದಲ್ಲಿನ ಬಡ ದಲಿತರ ಭೂಮಿಯನ್ನು ಕಸಿದುಕೊಳ್ಳುವ ಪ್ರವೃತ್ತಿಗೆ ಕಡಿವಾಣ ಹಾಕಲು ಮುಂದಾಗಿರುವ ರಾಜ್ಯ ಸರ್ಕಾರ, ಬಹು ವರ್ಷಗಳ ಬೇಡಿಕೆಯಾದ ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ಮಾಡಿದೆ.
![](https://raitapijagattu.com/eekudokr/2024/06/PTCLActAmendment.jpg)
4 ಲಕ್ಷ ಎಕರೆ ಭೂಮಿ ಮಾರಾಟ
ಈಗಾಗಲೇ ದಲಿತರಿಗೆ ಮಂಜೂರಾಗಿರುವ ಜಮೀನಿನಲ್ಲಿ ಅಂದಾಜು 4 ಲಕ್ಷ ಎಕರೆಯಷ್ಟು ಭೂಮಿ ಪರಭಾರೆಯಾಗಿದೆ. 50,000 ಪ್ರಕರಣಗಳು ವಜಾ ಆಗಿವೆ ಎನ್ನಲಾಗುತ್ತಿದೆ. ಅದರಲ್ಲಿ ಬೆಂಗಳೂರಿನಲ್ಲಿಯೇ 25,000 ಪ್ರಕರಣಗಳು ಸೇರಿವೆ.
ಇನ್ನೂ 50,000 ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ ಎಂಬ ಮಾಹಿತಿ ಇದೆ. ಇದರ ಜತೆಗೆ, ಬಗರ್ಹುಕುಂ ಸಕ್ರಮ ಸಮಿತಿಯ ಮುಂದೆ ಇನ್ನೂ 9 ರಿಂದ 10 ಲಕ್ಷ ಎಕರೆ ಭೂಮಿ ಮಂಜೂರಿಗೆ ಅರ್ಜಿಗಳು ವಿಲೇವಾರಿ ಆಗುವುದು ಬಾಕಿ ಇದೆ. ಬಗರ್ಹುಕುಂ ಸಮಿತಿಗಳೇ ರಚನೆಯಾಗಿಲ್ಲ.
ಅಗ್ಗದ ಬೆಲೆಗೆ ಖರೀದಿ!
ಸರ್ಕಾರ ದಮನಿತರಿಗೆ ಮಂಜೂರು ಮಾಡಿರುವ ಭೂಮಿಯನ್ನು ಬಡತನ, ಮುಗ್ಧತೆ ಮತ್ತು ಅಸಾಯಕತೆಯನ್ನು ಬಂಡವಾಳ ಮಾಡಿಕೊಂಡು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅತಿ ಅಗ್ಗದ ಬೆಲೆಗೆ, ಕೆಲವೊಮ್ಮೆ ಯಾವುದೇ ಹಣ ಕೊಡದೇ ಅಡಮಾನದ ಹೆಸರಿನಲ್ಲಿ ಸರ್ಕಾರದ ಅನುಮತಿ ಇಲ್ಲದೇ ಕಬಳಿಸಲಾಗಿದೆ.
ಮೂಲ ಮಂಜೂರಾತಿದಾರ ಅಥವಾ ಅವರ ಉತ್ತರಾಧಿಕಾರಿ (ಮಕ್ಕಳು, ಮೊಮ್ಮಕ್ಕಳು) ಸರ್ಕಾರದ ಮುಂದೆ ಅರ್ಜಿ ಹಾಕಿಕೊಂಡು ಹಕ್ಕು ಮರುಸ್ಥಾಪನೆ ಮಾಡಿಕೊಳ್ಳಲು ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ಅವಕಾಶ ಕಲ್ಪಿಸಿದೆ.ಕಾನೂನು ಇಲಾಖೆಯ ಅಭಿಪ್ರಾಯದೊಂದಿಗೆ ಸಿದ್ಧವಾಗಿರುವ ಸದರಿ ಪಿಟಿಸಿಎಲ್ ತಿದ್ದುಪಡಿ ಕಾಯ್ದೆ ಸಚಿವ ಸಂಪುಟ ಸಭೆಯಲ್ಲಿಯೂ ಚರ್ಚೆಯಾಗಿತ್ತು. ಕಾನೂನು ಇಲಾಖೆ ಒಂದೆರಡು ಸಲಹೆಯನ್ನು ನೀಡಿದ್ದರಿಂದ ಮತ್ತಷ್ಟು ಚರ್ಚೆಯೊಂದಿಗೆ ತಿದ್ದುಪಡಿ ಮಾಡಲಾಗಿದೆ.