Solar Agricultural Pump Set Scheme : ಪಿಎಂ-ಕುಸುಮ್ ಯೋಜನೆಯಡಿ (PM-KUSUM Solar pump Scheme) ಪಂಪ್ಸೆಟ್ಗಳಿಗೆ ನಿರಂತರ ಸೋಲಾರ್ ವಿದ್ಯುತ್ ವ್ಯವಸ್ಥೆ ಕಲ್ಪಿಸಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಯೋಜನೆಗೆ ಯಾರೆಲ್ಲ ಅರ್ಹರು? ಯಾರಿಗೆ ಎಷ್ಟೆಷ್ಟು ಸಹಾಯಧನ? ಅರ್ಜಿ ಸಲ್ಲಿಕೆ ಹೇಗೆ? ಇದರಿಂದ ರೈತರಿಗಾಗುವ ಅನುಕೂಲಗಳೇನು? ಸಂಪೂರ್ಣ ಮಾಹಿತಿ ಇಲ್ಲಿದೆ…
ರಾಜ್ಯದಲ್ಲಿ ಪ್ರತಿವರ್ಷ ಕೃಷಿ ಪಂಪ್ಸೆಟ್ಗಾಗಿಯೇ (Solar Agricultural Pump Set ) ಸರ್ಕಾರವು ಸರಿಸುಮಾರು 12 ಸಾವಿರ ಕೋಟಿ ರೂಪಾಯಿ ಸಬ್ಸಿಡಿ ನೀಡುತ್ತಿದೆ. ಇಷ್ಟು ಸಹಾಯಧನ ಒದಗಿಸಿಯೂ ಕೂಡ ರೈತರ ಪಂಪ್ಸೆಟ್ ಸಮಸ್ಯೆಗೆ ಸಮರ್ಪಕ ಪರಿಹಾರ ಸಿಕ್ಕಿಲ್ಲ. ಹೀಗಾಗಿ ಜಾಲಯುಕ್ತ ವಿದ್ಯುತ್ ಬದಲಿಗೆ ಜಾಲಮುಕ್ತ ಸೋಲಾರ್ ವ್ಯವಸ್ಥೆ ಕಲ್ಪಿಸುವ ಮೂಲಕ ಪರಿಹಾರ ಕಂಡುಕೊಳ್ಳಲು ಚಿಂತನೆ ನಡೆಸಿದೆ.
ಈ ನಿಟ್ಟಿನಲ್ಲಿ ದೃಢಸಂಕಲ್ಪ ಕೈಗೊಂಡಿರುವ ರಾಜ್ಯ ಸರಕಾರ ಕೃಷಿ ಪಂಪ್ಸೆಟ್ಗಳಿಗೆ ಸೋಲಾರ್ ವಿದ್ಯುತ್ ಸಂಪರ್ಕ ಕಲ್ಪಿಸಲು ಮುಂದಾಗಿದ್ದು; ಇದೀಗ ಕೃಷಿ ಪಂಪ್ಸೆಟ್ಗೆ ಸೋಲಾರ್ ವಿದ್ಯುತ್ ವ್ಯವಸ್ಥೆ ಕಲ್ಪಿಸಲು ಕೇಂದ್ರ ಸರ್ಕಾರದ ಪಿಎಂ ಕುಸುಮ್ ಯೋಜನೆಯಡಿ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಈಗಾಗಲೇ 18,000 ರೈತರು ನೋಂದಣಿ ಮಾಡಿಸಿದ್ದಾರೆ ಎಂದು ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಗೌರವ್ ಗುಪ್ತಾ ಹೇಳಿದ್ದಾರೆ.
ಇದನ್ನೂ ಓದಿ: ಇನ್ಮುಂದೆ ಈ ರೈತರ ಭೂಮಿ ಮಾರುವಂತಿಲ್ಲ, ಯಾರೂ ಖರೀದಿಸುವಂತೆಯೂ ಇಲ್ಲ | ಬಂತು ಹೊಸ ಕಾಯ್ದೆ PTCL Act Amendment
ಏನಿದು ಪಿಎಂ-ಕುಸುಮ್ ಯೋಜನೆ?
ಪಿಎಂ-ಕುಸುಮ್ (ಪ್ರಧಾನಮಂತ್ರಿ ಕಿಸಾನ್ ಊರ್ಜಾ ಸುರಕ್ಷಾ ಏವಂ ಉತ್ಪಾನ ಮಹಾಭಿಯಾನ್ – ಕುಸುಮ್) ಯೋಜನೆಯು ಭಾರತದಲ್ಲಿನ ರೈತರಿಗೆ ಇಂಧನ ಭದ್ರತೆಯನ್ನು ಖಾತ್ರಿಪಡಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯಡಿ ರೈತರು ಸೋಲಾರ್ ಪಂಪ್ ಅಳವಡಿಸಿಕೊಂಡು ವಿದ್ಯುತ್ ಮತ್ತು ಕಾರ್ಮಿಕರಿಗೆ ತಗುಲುವ ವೆಚ್ಚವನ್ನು ಕಡಿಮೆ ಮಾಡಿಕೊಳ್ಳಬಹುದು. ಜತೆಗೆ ಕಡಿಮೆ ಖರ್ಚಿನಲ್ಲಿ ನೀರಾವರಿ ಕೃಷಿ ಮಾಡಬಹುದಾಗಿದೆ. ಸೋಲಾರ್ ಪಂಪ್ ಅಳವಡಿಕೆಗೆ ಸರ್ಕಾರ ಆರ್ಥಿಕ ನೆರವು ನೀಡುತ್ತದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯೋಜನೆಯಡಿ ಸೋಲಾರ್ ಪಂಪ್ ಸ್ಥಾಪಿಸಲು ರೈತರಿಗೆ ಸಹಾಯಧನ ನೀಡುತ್ತವೆ. ಈ ಯೋಜನೆಯಿಂದ ನೀರಾವರಿಗಾಗಿ ಖರ್ಚಾಗುತ್ತಿದ್ದ ವಿದ್ಯುತ್ ಉಳಿತಾಯವಾಗಲಿದೆ. ಒಮ್ಮೆ ಸೋಲಾರ್ ಪವರ್ ಪಂಪ್ ಅಳವಡಿಸಿಕೊಂಡರೆ ಸುಮಾರು 25 ವರ್ಷಗಳ ಕಾಲ ನಿಶ್ಚಿಂತೆಯಿ೦ದ ರೈತರು ಕೃಷಿಯಲ್ಲಿ ತೊಡಗಿಕೊಳ್ಳಬಹುದು.
ಈ ಯೋಜನೆಗೆ ಯಾರೆಲ್ಲ ಅರ್ಹರಲ್ಲ
ಗಮನಾರ್ಹವೆಂದರೆ ಹಾಲಿ ವಿದ್ಯುತ್ ಸಂಪರ್ಕವನ್ನು ಹೊಂದಿರುವ ಪಂಪ್ಸೆಟ್ ಹೊಂದಿರುವ ರೈತರು ಈ ಯೋಜನೆಗೆ ಅರ್ಹರಲ್ಲ. ರೈತರ ಜಮೀನಿನಲ್ಲಿ ಕೊಳವೆಬಾವಿ ಕೊರೆಸಲು ಸಿದ್ದವಿದ್ದು; ಹೊಸ ಕೃಷಿ ಪಂಪ್ಸೆಟ್ಗಳಿಗೆ ಮಾತ್ರ ಈ ಯೋಜನೆ ಅನ್ವಯವಾಗುತ್ತದೆ.
ಈಗಾಗಲೇ ಗಂಗಾಕಲ್ಯಾಣ ಯೋಜನೆಯಡಿ ಲಾಭ ಪಡೆದಿರುವ ಹಾಗೂ ಪಡೆಯಲು ಅರ್ಜಿ ಸಲ್ಲಿಸಿರುವ ರೈತರಿಗೆ ಸದರಿ ಯೋಜನೆಯ ಲಾಭ ಪಡೆಯಲು ಅರ್ಹರಿರುವುದಿಲ್ಲ. ಎಲ್ಲಾ ವರ್ಗದ ಅರ್ಜಿಗಳಲ್ಲಿ ವಿಶೇಷಚೇತನರಿಗೆ ಶೇ.5ರಷ್ಟು ಮೀಸಲಾತಿ ಇರುತ್ತದೆ. ಕುಟುಂಬಕ್ಕೆ ಒಂದು ಸೌರ ಕೃಷಿ ಪಂಪ್ ಸೆಟ್ ಸೀಮಿತಗೊಳಿಸಲಾಗಿದೆ.
ಯಾರಿಗೆ ಎಷ್ಟು ಸಬ್ಸಿಡಿ?
ಕುಸುಮ್ ಬಿ ಯೋಜನೆಯಡಿ ಸೌರ ಕೃಷಿ ಪಂಪ್ಸೆಟ್ ಅಳವಡಿಸಲು ಕೇಂದ್ರದಿ೦ದ ಶೇ.30 ಸಬ್ಸಿಡಿ ಹಾಗೂ ರಾಜ್ಯ ಸರ್ಕಾರದಿಂದ ಶೇ.30 ರಷ್ಟು ಸಬ್ಸಿಡಿ ನೀಡಿ ಉಳಿದ ಶೇ.40ರಷ್ಟು ಪಾಲು ಫಲಾನುಭವಿ ರೈತ ಭರಿಸಬೇಕಾಗಿತ್ತು. ಆದರೆ ರಾಜ್ಯ ಸರ್ಕಾರ ರಾಜ್ಯದ ಸಬ್ಸಿಡಿ ಪಾಲನ್ನು ಶೇ.30ರಿಂದ 50ಕ್ಕೆ ಏರಿಸಿದೆ.
ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಾಯಧನ ಸೇರಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಶೇ.80ರಷ್ಟು ಸಹಾಯಧನ ಹಾಗೂ ಇತರೆ ವರ್ಗಗಳ ರೈತರಿಗೆ ಶೇ.60ರಷ್ಟು ಸಹಾಯಧನ ನೀಡಲಾಗುತ್ತದೆ.
ಅರ್ಜಿ ಸಲ್ಲಿಕೆ ಹೇಗೆ?
ರೈತರು ತಮ್ಮ ಆಧಾರ್, ಆರ್ಟಿಸಿ ಮತ್ತು ಬ್ಯಾಂಕ್ ವಿವರಗಳೊಂದಿಗೆ ಆನ್ಲೈನ್ ಪೋರ್ಟಲ್ https://souramitra.com ಮೂಲಕ ನೋಂದಾಯಿಸಿಕೊಳ್ಳಬಹುದು. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕ ಸರಕಾರದ ಇಂಧನ ಇಲಾಖೆಯ ಸೌರ ಕೃಷಿ ಪಂಪ್ಸೆಟ್ ಯೋಜನೆ (Solar Agricultural Pump Set Scheme) ಅಧಿಕೃತ ವೆಬ್ಸೈಟ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಕೇಳಲಾದ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ವಿವರಗಳಿಗೆ ಸಹಾಯವಾಣಿ ಸಂಖ್ಯೆ 080-22202100ಗೆ ಕರೆ ಮಾಡಿ ವಿಚಾರಿಸಬಹುದು.
ಸೌರಮಿತ್ರ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ