ಅಕ್ರಮ-ಸಕ್ರಮ ಬಗರ್ ಹುಕುಂ (Bagar Hukum akrama sakrama) ಯೋಜನೆ ನಿಯಮ ಸಡಿಲಿಕೆ ಮಾಡಲಾಗಿದ್ದು; ಅರ್ಹ ರೈತರಿಗೆ ತ್ವರಿತವಾಗಿ ಜಮೀನು ಮಂಜೂರು ಮಾಡಿ, ಡಿಜಿಟಲ್ ಸಾಗುವಳಿ ಚೀಟಿ ನೀಡುವ ಪ್ರಕ್ರಿಯೆಗೆ ಚುರುಕು ನೀಡಲಾಗಿದೆ.
ಈಚೆಗೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಭೂ ದಾಖಲಾತಿ ಇಲಾಖೆ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಸರನ್ ಮೂಲಕ ಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಿ ತ್ವರಿತ ಅರ್ಜಿ ವಿಲೇವಾರಿಗೆ ಸ್ಪಷ್ಟ ಸೂಚನೆ ನೀಡಿದರು.
ಇದನ್ನೂ ಓದಿ: Borewell permission : ಇನ್ಮುಂದೆ ಅನುಮತಿ ಇಲ್ಲದೇ ಬೋರ್ವೆಲ್ ಕೊರೆಸುವಂತಿಲ್ಲ
ನಿಯಮ ಸಡಿಲಿಕೆ
ಅಕ್ರಮ-ಸಕ್ರಮ ಬಗರ್ ಹುಕುಂ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅರ್ಹ ರೈತರಿಗೆ ಸಾಗುವಳಿ ಚೀಟಿ ನೀಡುವುದು ಸರ್ಕಾರದ ಕರ್ತವ್ಯವಾಗಿದೆ. ಹಾಗೊಂದು ವೇಳೆ ಅರ್ಜಿದಾರರು ಮೃತಪಟ್ಟಿದ್ದರೆ ಕುಟುಂಬಸ್ಥರಿಗೆ ಕಾನೂನಿನ ಪ್ರಕಾರ ಜಮೀನು ಮಂಜೂರು ಮಾಡಬೇಕೆಂದು ಸಚಿವರು ರಾಜ್ಯದ ಎಲ್ಲಾ ತಹಸೀಲ್ದಾರ್ ಹಾಗೂ ಎಡಿಎಲ್ಆರ್ಗಳಿಗೆ (ಭೂ ದಾಖಲೆಯ ಸಹಾಯಕ ನಿರ್ದೇಶಕ) ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಅನುಕೂಲಸ್ಥರಿಗೆ ಎಲ್ಲಾ ಮಾಹಿತಿ ಇದ್ದು ತಮಗೆ ಬೇಕಾದ ಸವಲತ್ತುಗಳನ್ನು ಪಡೆಯುತ್ತಾರೆ. ಆದರೆ, ಬಡವರು, ಸಮಾಜದ ಕಟ್ಟಕಡೆಯ ಜನರಿಗೆ ಮಾಹಿತಿಯ ಕೊರತೆಯಿದ್ದು ಅಂತಹವರಿಗೆ ಅಧಿಕಾರಿಗಳೇ ಖುದ್ದು ಮುತುವರ್ಜಿ ವಹಿಸಿ ಅರ್ಜಿಯಲ್ಲಿ ಅರ್ಹತೆಯಿದ್ದಲ್ಲಿ ಮಂಜೂರು ಮಾಡಬೇಕೆಂದು ಸೂಚಿಸಿದರು.
ಇದನ್ನೂ ಓದಿ: PM-Kisan FID : ಪಿಎಂ ಕಿಸಾನ್ ಯೋಜನೆ ಕೇಂದ್ರ ಕೃಷಿ ಇಲಾಖೆ ಹೊಸ ನಿಯಮ
ಸಲ್ಲಿಕೆಯಾದ ಅರ್ಜಿಗಳೆಷ್ಟು?
ಬಗರ್ ಹುಕುಂ ಸರಕಾರಿ ಜಮೀನು ಹಕ್ಕುದಾರಿಕೆ ನೀಡುವ ಸಲುವಾಗಿಯೇ ಕರ್ನಾಟಕ ಭೂ ಕಂದಾಯ ಕಾಯಿದೆ 1964 ಅನ್ವಯ ನಮೂನೆ 50, ನಮೂನೆ 53 ಹಾಗೂ ನಮೂನೆ 57ರಲ್ಲಿ ಅರ್ಜಿ ಸ್ವೀಕರಿಸಲಾಗಿದೆ. 1991ರಿಂದ ಶುರುವಾದ ಅರ್ಜಿ ಸ್ವೀಕಾರ ನಮೂನೆ 57ರ ಅಡಿಯಲ್ಲಿ ಅರ್ಜಿ ಸ್ವೀಕರಿಸುವ ಅವಧಿ ಕಳೆದ 2023ರ ಏಪ್ರಿಲ್ಗೆ ಅಂತ್ಯವಾಗಿದೆ.
ರಾಜ್ಯದಲ್ಲಿ ಈ ಎಲ್ಲ ನಮೂನೆಗಳಲ್ಲಿ ಬಗರ್ ಹುಕುಂ ಜಮೀನು ಸಕ್ರಮೀಕರಣ ಕೋರಿ ಒಟ್ಟು 9,56,512 ಅರ್ಜಿ ಸಲ್ಲಿಕೆಯಾಗಿವೆ. ಬರೋಬ್ಬರಿ 54 ಲಕ್ಷ ಎಕರೆ ಭೂಮಿ ಮಂಜೂರಾತಿಗೆ ಕೋರಿಕೆ ಸಲ್ಲಿಕೆಯಾಗಿವೆ. ಹೀಗೆ ಅರ್ಜಿ ಸಲ್ಲಿಸಿದ ಅರ್ಹ ರೈತರಿಗೆ ಇದೀಗ ಡಿಜಿಟಲ್ ಹಕ್ಕುಪತ್ರ ಸಿಗಲಿದೆ.
ಜಮೀನು ಮಂಜೂರಾತಿ ಪ್ರಕ್ರಿಯೆ ಚುರುಕು
ಆ ಪ್ರಕಾರ ಬಗರ್ ಹುಕುಂಗೆ ಮಂಜೂರಾತಿ ನೀಡುವ ಪ್ರಕ್ರಿಯೆಗಳು ಆರಂಭಗೊ೦ಡಿದ್ದು ಕಳೆದ ಡಿಸೆಂಬರ್ 15ರೊಳಗೆ ಹದಿನೈದು ಸಾವಿರ ಪ್ರಕರಣಗಳು ತಹಶೀಲ್ದಾರ್ರಿಗೆ ಬರಬೇಕೆಂದು ಗುರಿ ನಿಗದಿಪಡಿಸಲಾಗಿತ್ತು. ಆದರೆ, ನಿಗದಿತ ಗುರಿಗಿಂತ ಪ್ರಕರಣಗಳ ಸಂಖ್ಯೆ ಹತ್ತು ಸಾವಿರ ಕಡಿಮೆಯಿದೆ. ಮುಂದಿನ ದಿನದಲ್ಲಾದರೂ ಈ ಜಮೀನು ಕಾರ್ಯವನ್ನು ಚುರುಕುಗೊಳಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: Crop Insurance : ಬೆಳೆ ವಿಮೆ ಹಣ ಜಮಾ ವಿವರ
2 Comments