End of heat wave : ನಿರಂತರ ಬೆಂಕಿ ಬಿಸಿಲಿನಿಂದ ಕಂಗಾಲಾಗಿರುವ ರಾಜ್ಯದ ಜನತೆಗೆ ಸಿಹಿಸುದ್ದಿ ಹೊರಬಿದ್ದಿದೆ. ಕಾದ ಕಾವಲಿಯಂತಾಗಿರುವ ಭೂಮಿಗೆ ಜೋರು ಮಳೆ ಸುರಿಯುವ ಮೂಲಕ ಹಲವು ಸಾವು-ನೋವು, ರೋಗ ರುಜಿನಗಳಿಗೆ ಕಾರಣವಾಗಿದ್ದ ‘ಶಾಖದ ಅಲೆ’ (Heat wave) ಮುಕ್ತಾಯವಾಗುವ ಸೂಚನೆ ಸಿಕ್ಕಿದೆ.
ಭಾರತೀಯ ಹವಾಮಾನ ಇಲಾಖೆ (IMD) ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (KSNDMC) ಮುನ್ಸೂಚನಾ ವರದಿ ರಾಜ್ಯಾದ್ಯಂತ ಮಳೆ ಸಕ್ರೀಯವಾಗುವ ಮುನ್ಸೂಚನಾ ಮಾಹಿತಿ ನೀಡಿದೆ. ಆ ಮೂಲಕ ‘ಶಾಖದ ಅಲೆ’ ಅಂತ್ಯವಾಗುವ ಸಂಭವವಿದೆ.
ಇದನ್ನೂ ಓದಿ: Male nakshatragalu-2024 : 2024ರ ಮಳೆ ನಕ್ಷತ್ರಗಳು | ಹೇಗಿದೆ ಈ ವರ್ಷದ ಮಳೆಗಾಲ?
ಮೇ 11ರ ನಂತರ ರಾಜ್ಯಾದ್ಯಂತ ಮಳೆ
ಸಾಮಾನ್ಯವಾಗಿ ಮುಂಗಾರು ಮಳೆ ಜೂನ್’ನಿಂದ ಆರಂಭವಾಗುತ್ತದೆ. ಅಲ್ಲಿಯ ವರೆಗೂ ಹನಿಯಬೇಕಿದ್ದ ಮುಂಗಾರು ಪೂರ್ವ ಮಳೆ ಈ ವರ್ಷ ಅಷ್ಟೇನು ಆಶಾದಾಯವಾಗಿ ಸುರಿದಿಲ್ಲ. ಏಪ್ರಿಲ್ ಕೊನೆಯಲ್ಲಿ ಮತ್ತು ಮೇ ಮೊದಲ ವಾರದಲ್ಲಿ ರಾಜ್ಯದ ಕೆಲವು ಕಡೆಗೆ ಮಳೆಯಾದರೂ ಗರಿಷ್ಠ ತಾಪಮಾನದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.
ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಬರೋಬ್ಬರಿ 47 ಡಿಗ್ರಿ ಸೆಲ್ಸಿಯಸ್ ವರೆಗೂ ತಾಪಮಾನ ದಾಖಲಾಗಿದೆ. ಈ ಉರಿ ಬಿಸಿಗೆ ಹಲವರು ಪ್ರಾಣ ಕಳೆದುಕೊಂಡ ವರದಿಯಾಗಿದೆ. ಸಮಾಧಾನದ ಸಂಗತಿ ಎಂದರೆ ಇದೇ ಮೇ 11ರ ನಂತರ ಮುಂಗಾರು ಪೂರ್ವ ಮಳೆ ರಾಜ್ಯಾದ್ಯಂತ ಸಕ್ರೀಯವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಬಂಗಾಳ ಕೊಲ್ಲಿಯಲ್ಲಿ ಸುಳಿಗಾಳಿ ಪ್ರಭಾವ
ರಾಜ್ಯದಲ್ಲಿ ಹಠಾತ್ ಮಳೆಗೆ ಪ್ರಮುಖ ಕಾರಣ ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಸುಳಿಗಾಳಿ. ಹೌದು, ಕರ್ನಾಟಕದ ಹವಾಮಾನದ ಮೇಲೆ ಅರಬ್ಬಿ ಸಮುದ್ರ ಹಾಗೂ ಬಂಗಾಳ ಕೊಲ್ಲಿ ಪರಿಣಾಮ ಬೀರುವುದು ಸಾಮಾನ್ಯ. ಇದೀಗ ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಸುಳಿಗಾಳಿಯಿಂದಾಗಿ ಕರ್ನಾಟಕದಲ್ಲಿ ಹವಾಮಾನ ಬದಲಾಗಿದೆ.
ಬಂಗಾಳಕೊಲ್ಲಿ ಸಮುದ್ರದ ಆಗ್ನೇಯ ಭಾಗದಲ್ಲಿ ಮೇಲ್ಮೈ ಸುಳಿಗಾಳಿ ಸೃಷ್ಟಿಯಾಗಿದ್ದು; ತೇವಭರಿತ ಈ ಸುಳಿಗಾಳಿ ತನ್ನ ಮೂಲ ದಿಕ್ಕಿನಿಂದ ಪೂರ್ವದ ಕಡೆಗೆ ಬೀಸಿದೆ. ಹೀಗಾಗಿ ಬೆಂಗಳೂರಿನಲ್ಲಿ ಮಳೆಯಾಗುತ್ತಿದೆ. ರಾಜಧಾನಿಯಲ್ಲಿ ಸುರಿಯುತ್ತಿರುವ ಈ ಮಳೆ, ಮೇ 11ರ ಶನಿವಾರದಿಂದ ರಾಜ್ಯಾದ್ಯಂತ ವಿಸ್ತರಣೆಗೊಳ್ಳುವ ಸಂಭವವಿದೆ.
ಕರ್ನಾಟಕ ಮಾತ್ರವಲ್ಲ ಆಂಧ್ರ ಪ್ರದೇಶ, ತಮಿಳುನಾಡು ರಾಜ್ಯಗಳಲ್ಲೂ ಭಾರೀ ಮಳೆ ಆಗಲಿದೆ. ರಾಜ್ಯದ ಮಟ್ಟಿಗೆ ಹೇಳುವುದಾದರೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಕೊಡಗು, ಹಾಸನ, ಮೈಸೂರು, ರಾಮನಗರ, ಚಾಮರಾಜನಗರ ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಆಲಿಕಲ್ಲು ಸಹಿತ ಮಳೆ ಆಗುವ ನಿರೀಕ್ಷೆ ಇದೆ.
ಇದನ್ನೂ ಓದಿ: Monsoon 2024: ಈ ಬಾರಿ ಭರ್ಜರಿ ಮುಂಗಾರು ಮಳೆ | 45 ದಿನ ಮೊದಲೇ ‘ಮಳೆ ಮೂಡು’ ಬಿಚ್ಚಿಟ್ಟ ಹವಾಮಾನ ಇಲಾಖೆ