Drought Relief karnataka : ಕೇಂದ್ರ ಸರಕಾರ ಈಚೆಗೆ ಬಿಡುಗಡೆ ಮಾಡಿರುವ ಬರ ಪರಿಹಾರ ಹಣವನ್ನು ರಾಜ್ಯ ಸರಕಾರ (State Govt) ರೈತರ ಖಾತೆಗೆ ಜಮಾ ಮಾಡಲು ನಿರ್ಧರಿಸಿದೆ. ಇವತ್ತು (ಮೇ 3) ರಾಜ್ಯದ ಒಟ್ಟು 15 ಲಕ್ಷ ರೈತರ ಖಾತೆಗೆ ಪರಿಹಾರ ಮೊತ್ತ ಜಮಾ ಆಗಲಿದ್ದು; ಮುಂದಿನ ಮರ್ನಾಲ್ಕು ದಿನಗಳಲ್ಲಿ ಅರ್ಹ ರೈತರ ಖಾತೆಗೆ ಹಣ ಜಮಾ ಆಗಲಿದೆ ಎಂದು ಕಂದಾಯ ಇಲಾಖೆ (Department of Revenue) ಉನ್ನತ ಮೂಲಗಳು ತಿಳಿಸಿವೆ.
ಬಿಡುಗಡೆಯಾದ ಪರಿಹಾರವೆಷ್ಟು?
ಕಳೆದ 2023ರ ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದಾಗಿ ಕರ್ನಾಟಕ ತೀವ್ರ ಬರಗಾಲಕ್ಕೆ ತುತ್ತಾಗಿದೆ. ರಾಜ್ಯಾದ್ಯಂತ 48.19 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ನಷ್ಟವಾಗಿವೆ. ಈ ನಷ್ಟದಿಂದ ಸಣ್ಣ ಮತ್ತು ಅತಿ ಸಣ್ಣ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಸಂಕಷ್ಟಕ್ಕೆ ಈಡಾಗಿದ್ದಾರೆ.
ಕೇಂದ್ರ ಸರಕಾರಕ್ಕೆ ರಾಜ್ಯ ಸರಕಾರವು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ (NDRF) ಒಟ್ಟು 18,177.44 ಕೋಟಿ ರೂಪಾಯಿ ಪರಿಹಾರ ಬಿಡುಗಡೆ ಮಾಡಲು ಮನವಿ ಸಲ್ಲಿಸಿತ್ತು. ಈ ವಿಚಾರವಾಗಿ ರಾಜಕೀಯ ಜಟಾಪಟಿ ನಡೆದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರಿಂದ ಕೇಂದ್ರ ಸರಕಾರ ಕೇವಲ 3,454 ಕೋಟಿ ರೂಪಾಯಿ ಮಾತ್ರ ಬಿಡುಗಡೆ ಮಾಡಿದೆ.
ಸಂಪೂರ್ಣ ಹಣ ರೈತರ ಖಾತೆಗೆ ಜಮಾ
ಕೇಂದ್ರದಿAದ ಬಿಡುಗಡೆಯಾಗಿರುವ 3,454 ಕೋಟಿ ರೂಪಾಯಿ ಸಂಪೂರ್ಣ ಪರಿಹಾರವನ್ನು ಇನ್ಪುಟ್ ಸಬ್ಸಿಡಿಗೆ ಪೂರ್ಣ ಬಳಕೆ ಮಾಡಿಕೊಳ್ಳಲು ರಾಜ್ಯ ಸರಕಾರ ನಿರ್ಧರಿಸಿದೆ. ಈಗಾಗಲೇ ರೈತರಿಗೆ ವಿತರಿಸಿರುವ ಗರಿಷ್ಠ 2,000 ರೂಪಾಯಿ ವರೆಗಿನ ಪರಿಹಾರ ಮೊತ್ತವನ್ನು ಕಡಿತ ಮಾಡಿಕೊಂಡು ಬಾಕಿ ಮೊತ್ತವನ್ನು ಡಿಬಿಟಿ ಮೂಲಕ ರಾಜ್ಯದ ಸುಮಾರು 34 ಲಕ್ಷ ರೈತರ ಖಾತೆಗೆ ಜಮಾ ಮಾಡಲಾಗುತ್ತಿದೆ.
ಈ ಹಿನ್ನಲೆಯಲ್ಲಿ ಇಂದು (ಮೇ 3) ಮೊದಲಿಗೆ 15 ಲಕ್ಷ ರೈತರಿಗೆ ಜಮಾ ಮಾಡುವ ಪ್ರಕ್ರಿಯೆ ನಡೆಯಲಿದೆ. ಉಳಿದ ರೈತರಿಗೆ ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಪರಿಹಾರದ ಹಣ ತಲುಪಲಿದೆ. ರಾಜ್ಯದಲ್ಲಿ 2ನೇ ಹಂತದ ಚುನಾವಣೆ ವೇಳೆಗೆ ಅಂದರೆ ಮೇ 7ರ ಒಳಗಾಗಿ ಬಹುತೇಕ ಬೆಳೆ ನಷ್ಟ ಪರಿಹಾರ ರೈತರಿಗೆ ತಲುಪುವಂತೆ ವ್ಯವಸ್ಥೆ ಮಾಡಲಾಗಿದೆ.
ಯಾರಿಗೆ ಎಷ್ಟು ಪರಿಹಾರ ಸಿಗಲಿದೆ?
ಕಳೆದ ಮುಂಗಾರು ಹಂಗಾಮಿನಲ್ಲಿ ಬೆಳೆ ನಷ್ಟ ಪರಿಹಾರಕ್ಕೆ ಅರ್ಹರಾಗಿದ್ದ 33.60 ಲಕ್ಷ ರೈತರ ಪೈಕಿ ಅರ್ಧ ಎಕರೆ ಮತ್ತು ಅದಕ್ಕಿಂತ ಕಡಿಮೆ ವಿಸ್ತೀರ್ಣದ ರೈತರಿಗೆ ಮಧ್ಯಂತರ ಪರಿಹಾರದಲ್ಲೇ ಪೂರ್ಣ ಮೊತ್ತ ತಲುಪಿದ್ದು, ಉಳಿದ ರೈತರಿಗೆ ಈಗ ಬಾಕಿ ಪರಿಹಾರ ಮೊತ್ತ ತಲುಪಲಿದೆ.
ಈಗಾಗಲೇ ‘ಫ್ರೂಟ್ಸ್’ ತಂತ್ರಾ೦ಶದಲ್ಲಿ ಯಾವ ರೈತರಿಗೆ ಎಷ್ಟು ಪರಿಹಾರ ಎಂಬುದನ್ನು ಲೆಕ್ಕ ಹಾಕಲಾಗಿದೆ. ಮಳೆಯಾಶ್ರಿತ ಜಮೀನಿಗೆ ಒಟ್ಟು ಎರಡು ಹೆಕ್ಟೇರ್ಗೆ 17,000 ರೂಪಾಯಿ, ನೀರಾವರಿ ಜಮೀನಿಗೆ ಹೆಕ್ಟೇರ್ಗೆ ಒಟ್ಟು ಎರಡು ಹೆಕ್ಟೇರ್ಗೆ 34,000 ರೂಪಾಯಿ ಹಾಗೂ ಬಹುವಾರ್ಷಿಕ ಬೆಳೆಯಾದ ತೋಟಗಾರಿಕೆ ಬೆಳೆಗಳಿಗೆ ಒಟ್ಟು ಎರಡು ಹೆಕ್ಟೇರ್ಗೆ 45,000 ರೂಪಾಯಿ ಪರಿಹಾರ ಸಿಗಲಿದೆ.