Milk Incentive arrears : ಕಡು ಬೇಸಿಗೆ ಜನ-ಜಾನುವಾರುಗಳ ಜೀವ ಹಿಂಡುತ್ತಿದೆ. ರಾಜ್ಯಾದ್ಯಂತ ‘ಬರಗಾಲ’ ಘೋಷಣೆಯಾಗಿದ್ದು; ರೈತರ ಸ್ಥಿತಿ ದಿನದಿಂದ ದಿನಕ್ಕೆ ದಯನೀಯವಾಗುತ್ತಿದೆ. ಲೋಕಸಭೆ ಚುನಾವಣೆ ಪ್ರಚಾರದಲ್ಲಿ ತೊಡಗಿರುವ ಜನಪ್ರತಿನಿಧಿಗಳು ಕೆಸರೆರಚಾಟದಲ್ಲಿ ತೊಡಗಿದ್ದು; ರೈತರ ಗೋಳು ಕೇಳುವವರೇ ಇಲ್ಲದಂತಾಗಿದೆ. ಬರಗಾಲದಲ್ಲಿ ಆಸರೆ ಆಗಬೇಕಿದ್ದ ಹಾಲಿನ ಪ್ರೋತ್ಸಾಹಧನ ಹೈನು ರೈತರನ್ನು ಹತಾಶೆಗೆ ತಳ್ಳಿದೆ.
ಏಳು ತಿಂಗಳಿನಿಂದ ಪ್ರೋತ್ಸಾಧನವಿಲ್ಲ!
ಹೌದು, ಕಳೆದ ಏಳು ತಿಂಗಳಿನಿಂದ ಹಾಲಿನ ಪ್ರೋತ್ಸಾಹಧನ ಕೈ ಸೇರದೇ ಹೈನುಗಾರ ರೈತರು ಕಂಗಾಲಾಗಿದ್ದಾರೆ. ಕಡು ಬೇಸಿಗೆ ದೆಸೆಯಿಂದ ಮೇವು-ನೀರಿಗಾಗಿ ತತ್ವಾರ ಎದುರಾಗಿದ್ದು; ಹೈನುಗಾರಿಕೆ ಸವಾಲಿನ ಕೆಲಸವಾಗಿದೆ. ಅಧಿಕ ತಾಪಮಾನದಿಂದಾಗಿ ಹಾಲಿನ ಡಿಗ್ರಿ, ಫ್ಯಾಟ್ ಕುಸಿಯುತ್ತಿದೆ. ಹಾಲಿನ ಉಳುವರಿ ಕೂಡ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಈ ಸಮಯದಲ್ಲಿ ಹಾಲಿನ ಪ್ರೋತ್ಸಾಹಧನ ಕೂಡ ಬಾರದೇ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ಈಡು ಮಾಡಿದೆ.
ಹೈನುಗಾರಿಕೆಯನ್ನು ಪ್ರೋತ್ಸಾಹಿಸಲು ಸರಕಾರ ‘ಕ್ಷೀರ ಸಿರಿ’ (ksheerasiri) ಯೋಜನೆಯಡಿ ಪ್ರತಿ ಲೀಟರ್ ಹಾಲಿಗೆ 5 ರೂಪಾಯಿ ಪ್ರೋತ್ಸಾಹ ಧನ ನೀಡುತ್ತಿದೆ. ಆದರೆ ಈಚೆಗೆ ಈ ಹಣ ಸಕಾಲಕ್ಕೆ ಬಂದ ಉದಾಹಣೆಯೇ ಅಪರೂಪ. 2023 ಸೆಪ್ಟೆಂಬರ್ ತಿಂಗಳಿನಿಂದ ಪ್ರೋತ್ಸಾಹಧನ ಬಿಡುಗಡೆಯಾಗಿಲ್ಲ. ನಿತ್ಯವೂ ಹಾಲಿನ ಡೈರಿಯವರನ್ನು ಹೈನುಗಾರರು ಪೀಡಿಸುವಂತಾಗಿದೆ.
ಕೋಟ್ಯಾಂತರ ರೂಪಾಯಿ ಬಾಕಿ
ಕರ್ನಾಟಕ ಹಾಲು ಮಹಾಮಂಡಳದ (KMF) ಅಧೀನದಲ್ಲಿ ಒಟ್ಟು 16 ಜಿಲ್ಲಾ ಹಾಲು ಒಕ್ಕೂಟಗಳಿವೆ. ರಾಜ್ಯಾದ್ಯಂತ 20 ಲಕ್ಷಕ್ಕೂ ಹೆಚ್ಚು ಹಾಲು ಉತ್ಪಾದಕರಿದ್ದಾರೆ. ಈ ಎಲ್ಲಾ ರೈತರಿಗೂ ಏಳು ತಿಂಗಳಿನಿAದ ಪ್ರೋತ್ಸಾಹ ಧನ ಜಮೆಯಾಗಿಲ್ಲ. ಸರಕಾರ ನಮ್ಮ ಸಮಸ್ಯೆಗೆ ಸ್ಪಂದಿಸಿ, ಕೂಡಲೇ ಪ್ರೋತ್ಸಾಹಧನ ಬಿಡುಗಡೆ ಮಾಡಬೇಕು ಎಂದು ರೈತರು ಗೋಗರೆಯುತ್ತಿದ್ದಾರೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ 2008-09ರಲ್ಲಿ ಪ್ರತಿ ಲೀಟರ್ ಹಾಲಿಗೆ 2 ರೂಪಾಯಿ ಪ್ರೋತ್ಸಾಹಧನ ನಿಗದಿ ಮಾಡಿದ್ದರು. ಇದು ವಿಶೇಷ ಕೊಡುಗೆಯಾಗಿದ್ದು; ಆ ನಂತರ 2013ರಲ್ಲಿ ಸಿದ್ಧರಾಮಯ್ಯ ಸರಕಾರ 2ರಿಂದ 4 ರೂಪಾಯಿಗೆ ಏರಿಕೆ ಮಾಡಿತು. ಪ್ರಸ್ತುತ ಈ ಮೊತ್ತ ಇದೀಗ ಪ್ರತಿ ಲೀಟರ್ಗೆ 5 ರೂಪಾಯಿ ಇದೆ. ಆದರೆ ಈ ಹಣ ಬಿಡುಗಡೆ ಮಾಡದೇ ಬರಗಾಲದಲ್ಲಿಯೇ ಕೆಎಂಎಫ್ ಪಶು ಆಹಾರದ ಬೆಲೆ ಏರಿಸಿ, ಹಾಲಿನ ಬೆಲೆ ಇಳಿಕೆ ಮಾಡಿ ರೈತರ ಬೆನ್ನಿಗೆ ಬರೆ ಎಳೆದಿದೆ.
ಏರಿಕೆಯಾಗದ ಪ್ರೋತ್ಸಾಹಧನ
ಹಾಲು ಉತ್ಪಾದಕರಿಗೆ ಹಾಲು ಒಕ್ಕೂಟಗಳು ವೈಜ್ಞಾನಿಕವಾಗಿ ಬೆಲೆ ನೀಡುತ್ತಿಲ್ಲ ಎಂಬ ಅಸಮಾಧಾನದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೈನೋದ್ಯಮವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿ ಲೀಟರ್ ಹಾಲಿಗೆ ಒಕ್ಕೂಟಗಳು ನೀಡುವ ಬೆಲೆಯ ಜೊತೆಗೆ ರಾಜ್ಯ ಸರ್ಕಾರ 5 ರೂಪಾಯಿ ಪ್ರೋತ್ಸಾಹಧನ ನೀಡುತ್ತಾ ಬರುತ್ತಿದೆ. ದುರಂತವೆAದರೆ, ಈ 5 ರೂಪಾಯಿ ಪ್ರೋತ್ಸಾಹಧನ ಕಳೆದ ಆರೇಳು ವರ್ಷಗಳಿಂದ ಕೊಂಚವೂ ಏರಿಕೆಯಾಗದೇ ಇದ್ದಷ್ಟೇ ಇದೆ. ಇದೀಗ ಅದೂ ಕೂಡ ಆರು ತಿಂಗಳಿಗೋ ವರ್ಷಕ್ಕೋ ರೈತರ ಕೈ ಸೇರುತ್ತಿರುವುದು ಶೋಚನೀಯ.
ಬೆಳಗಾವಿಯಲ್ಲಿ ನಡೆದ ಕಳೆದ ಚಳಿಗಾಲದ ವಿಧಾನಮಂಡಲ ಅಧಿವೇಶನದಲ್ಲಿ ಸಚಿವ ಕೆ.ವೆಂಕಟೇಶ ಅವರು ‘ಮುಂದಿನ ದಿನಗಳಲ್ಲಿ ರೈತರಿಗೆ ನೀಡುತ್ತಿರುವ ಪ್ರೋತ್ಸಾಹಧನವನ್ನು 2 ರೂಪಾಯಿ ಹೆಚ್ಚಿಸಲಾಗುವುದು’ ಎಂದು ಭರವಸೆ ನೀಡಿದ್ದಾರೆ. ಆನಂತರ ಕೆಎಂಎಫ್ ಅಧ್ಯಕ್ಷರಾಗಿ ಭೀಮಾ ನಾಯ್ಕ್ ಆಯ್ಕೆ ಆದಾಗಲೂ ಈ ಭರವಸೆ ವ್ಯಕ್ತವಾಗಿತ್ತು. ಆದರೆ ಬರಬೇಕಾದದ್ದೇ ಏಳು ತಿಂಗಳಿನಿAದ ಬರುತ್ತಿಲ್ಲ ಎಂದು ರೈತರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪ್ರೋತ್ಸಾಹಧನ ಜಮಾ ಚೆಕ್ ಮಾಡಿ
ಈ ತನಕ ಎಷ್ಟು ಹಾಲಿನ ಪ್ರೋತ್ಸಾಹಧನ ಸಂದಾಯವಾಗಿದೆ ಎಂಬುವುದನ್ನು ರೈತರು ಮೊಬೈಲ್ನಲ್ಲಿಯೇ ಚೆಕ್ ಮಾಡಬಹುದು. ಅದಕ್ಕಾಗಿ ಮೊದಲಿಗೆ ಇಲ್ಲಿ ಕ್ಲಿಕ್ ಮಾಡಿ…
ಮಾಹಿತಿ ಕಣಜ ಜಾಲತಾಣದ Details of Milk Incentive ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ ನಿಮ್ಮ District, Taluk, Milk Union, Camp Office, Societyಗಳನ್ನು ಸೆಲೆಕ್ಟ್ ಮಾಡಿ Submit ಬಟನ್ ಒತ್ತಿ.
ಆಗ ನಿಮ್ಮೂರಿನ ನಿಮ್ಮ ಹಾಲಿನ ಸೊಸೈಟಿಯಲ್ಲಿ ಈವರೆಗೂ ಹಾಲಿನ ಪ್ರೋತ್ಸಾಹಧನ ಪಡೆದವರ ವಿವರ ಸಿಗುತ್ತದೆ. ಅದರಲ್ಲಿ ನಿಮ್ಮ ಹೆಸರು ಹುಡುಕಿ, ನಿಮಗೆ ಇದುವರೆಗೂ ಸಂದಾಯವಾದ ಹಾಲಿನ ಪ್ರೋತ್ಸಾಹಧನದ ವಿವರವನ್ನು ಪಡೆಯಬಹುದು.